ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 22: ಕರ್ನಾಟಕ ಚಾಲಕರ ಒಕ್ಕೂಟ, ಯಾದಗಿರಿ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಬುಧವಾರ ಆಟೋ ಘಟಕದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರಿಗೆ ಚಾಲಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಹಣಮೇಗೌಡ ಬಿರನಕಲ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು, ಚಾಲಕರು ತಮ್ಮ ಮತ್ತು ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಮದ್ಯಪಾನ ಅಥವಾ ಧೂಮಪಾನ ಮಾಡುತ್ತಾ ವಾಹನ ಚಾಲನೆ ಮಾಡದೇ, ಅತೀ ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು. ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು ಜೀವ ಉಳಿಸುವ ಮಹತ್ವದ ಕ್ರಮವಾಗಿದೆ ಎಂದು ತಿಳಿಸಿದರು. ಹಾಗೆಯೇ ವಾಹನಕ್ಕೆ ಮಾನ್ಯ ಇನ್ಸುರೇಷನ್ ಹೊಂದಿರುವುದು ಅತ್ಯಂತ ಅಗತ್ಯವಾಗಿದ್ದು, ಅಪಘಾತದ ಸಂದರ್ಭಗಳಲ್ಲಿ ಆರ್ಥಿಕ ರಕ್ಷಣೆ ಒದಗಿಸುತ್ತದೆ ಎಂದರು.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತವಾಗಿ ಪ್ರಯಾಣಿಸುವಂತೆ ಚಾಲಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸುರೇಶ, ಟ್ರಾಫಿಕ್ ಪಿಎಸ್ಐ ವೀರೇಶ, ಆರ್ಟಿಒ ನಿರೀಕ್ಷಕರಾದ ಹಯ್ಯಾಳಪ್ಪ, ಅಧ್ಯಕ್ಷರಾದ ಬಸು ಚಟ್ನಳ್ಳಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ (ಸಾಂಗ್ಲಿಯಾನ), ಗೌರವ ಅಧ್ಯಕ್ಷ ನಿಂಗಪ್ಪ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.











Leave a Reply