ಯಾದಗಿರಿಯಲ್ಲಿ ಭುಗಿಲೆದ್ದ ರೈತರ ಆಕ್ರೋಶ: ಬೆಳೆ ಹಾನಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ, ಸಂಪೂರ್ಣ ಸಾಲ ಮನ್ನಾಗೆ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ (ಜುಲೈ 15): ಮಳೆಯಿಲ್ಲದೆ ಬೆಳೆ ಒಣಗುತ್ತಿರುವುದು, ಸಾಲದ ಬಾಧೆಯಿಂದ ರೈತರ ಆತ್ಮಹತ್ಯೆ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಯಾದಗಿರಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಇಂದು ತುರ್ತು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದೆ.

ಈ ವರ್ಷದ ಮೇ ತಿಂಗಳಿನಲ್ಲಿ ರೋಹಿಣಿ ಮಳೆ ಪ್ರಾರಂಭವಾದಾಗ ಬಿತ್ತನೆ ಮಾಡಿದ್ದ ಬೆಳೆಗಳು, ಕಳೆದ 45 ದಿನಗಳಿಂದ ಮಳೆಯಿಲ್ಲದೆ ಸಂಪೂರ್ಣ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರಿಗೆ ತಕ್ಷಣವೇ ನೈಸರ್ಗಿಕ ವಿಕೋಪ ನಿಧಿಯಡಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಸಂಘವು ಆಗ್ರಹಿಸಿದೆ.
ರೈತರ ಸರಣಿ ಆತ್ಮಹತ್ಯೆ, 10 ಲಕ್ಷ ಪರಿಹಾರಕ್ಕೆ ಆಗ್ರಹ:**
ಸಾಲದ ಬಾಧೆ ತಾಳಲಾರದೆ ಶಹಾಪುರ ತಾಲೂಕಿನ ಟಿಪ್ಪನಹಳ್ಳಿ ಗ್ರಾಮದ ಸುಂದರಾಜ (ತಂದೆ ಭಾಗಣ್ಣ), ಚಟ್ನಳ್ಳಿ ಗ್ರಾಮದ ಮಲ್ಲಿಕಾರ್ಜುನ (38) ಹಾಗೂ ಬೇವಿನಹಳ್ಳಿ ಗ್ರಾಮದ ಮತ್ತೋರ್ವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನೊಂದ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಎಲ್ಲಾ ರೈತರನ್ನು ಋಣಮುಕ್ತಗೊಳಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಮುಖ ಬೇಡಿಕೆಗಳು:
ಕೆರೆಗಳಿಗೆ ನೀರು:ಆಲಮಟ್ಟಿ ಜಲಾಶಯದಲ್ಲಿ 90 ಟಿಎಂಸಿ ನೀರು ಸಂಗ್ರಹವಾಗಿದ್ದು, ಮಳೆಯಿಲ್ಲದೆ ಬತ್ತಿಹೋಗಿರುವ ಸುರಪುರ ತಾಲೂಕಿನ ಮಾಲಗತ್ತಿ, ಮೊಸಗುಂಡಾಲ, ಭೈರಮಡ್ಡಿ ಹಾಗೂ ಶಹಾಪುರ ತಾಲೂಕಿನ ಶೇಟ್ಟಕೇರಾ, ಹೊಸಕೇರಾ, ಸಗರ, ಗುಂಡಳ್ಳಿ, ಖಾನಾಪುರ ಕೆರೆಗಳಿಗೆ ನೀರು ತುಂಬಿಸಬೇಕು.

ಉದ್ಯೋಗ ಖಾತ್ರಿ: ಬರಗಾಲ ಘೋಷಿಸಿ, ರೈತರು ಮತ್ತು ಕೃಷಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ (NREGA) ಅಡಿ ನಿರಂತರ ಕೆಲಸ ನೀಡಬೇಕು ಹಾಗೂ 15 ದಿನಗಳಿಗೊಮ್ಮೆ ಕೂಲಿ ಪಾವತಿಸಬೇಕು.
ವಸತಿ ಹಕ್ಕು: ಶಹಾಪುರ ತಾಲೂಕಿನ ಶೇಟ್ಟಕೇರಾ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುವ 13 ದಲಿತ ಬಡ ಕುಟುಂಬಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ವಿದ್ಯುತ್ ಒದಗಿಸಿ ಮನೆ ಕಟ್ಟಿಸಿಕೊಡಬೇಕು.

ಭ್ರಷ್ಟಾಚಾರ ತನಿಖೆ: ಜಲ ಜೀವನ್ ಮಿಷನ್ (JJM) ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ನೀರು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಭ್ರಷ್ಟ ಪಿಡಿಒ ಹಾಗೂ ಗ್ರಾ.ಪಂ. ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹೊಸಕೇರಿ ಗ್ರಾ.ಪಂ. ವ್ಯಾಪ್ತಿಯ 348 ಮನೆಗಳ ನಿರ್ಮಾಣದಲ್ಲಿನ ನಕಲಿ ದಾಖಲೆ ಸೃಷ್ಟಿಸಿರುವ ಹಗರಣದ ತನಿಖೆಯಾಗಬೇಕು.
ಬೆಳೆ ವಿಮೆ: ಅವೈಜ್ಞಾನಿಕ ಖಾಸಗಿ ಬೆಳೆ ವಿಮೆ ಕಂಪನಿಗಳನ್ನು ಕೈಬಿಟ್ಟು, ಸರ್ಕಾರವೇ ನೇರವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು.

ರೈತರ ಮೇಲಿನ ಕೇಸು ವಾಪಸ್: ಬೆಂಗಳೂರಿನಲ್ಲಿ ಭೂಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿರುವ ಸಂಘವು, ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಬೇಷರತ್ತಾಗಿ ಹಿಂಪಡೆಯುವಂತೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಅಣೆಗುಂದಿ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಶಹಾಪುರ ತಾಲೂಕು ಅಧ್ಯಕ್ಷ ತಮ್ಮಣ್ಣ ಜಹಗೀರದಾರ, ಸುರಪುರ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku