ಸಾಧಕರನ್ನು ಸನ್ಮಾನಿಸಿದ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್

Posted by

bdcci photo 02 (1)

ಬಳ್ಳಾರಿ :  ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಪ್ರತಿಭೆಗಳನ್ನು – ಸಾಧಕರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಗೌರವಿಸಿ ಅಭಿನಂದಿಸಿ ಪ್ರೋತ್ಸಾಹಿಸುವುದು ಸಾಧಕರ ಭವಿಷ್ಯದ ಸಾಧನೆಗೆ ಸ್ಫೂರ್ತಿ ನೀಡಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ `ಪ್ರತಿಭಾವಂತರ ಅಭಿನಂದನೆ’ಯನ್ನು ನೆರವೇರಿಸಿ ಮಾತನಾಡಿದ ಅವರು, ಸಾಧನೆಗೆ ಪ್ರೋತ್ಸಾಹ – ಸ್ಫೂರ್ತಿ ಮತ್ತು ಸಹಕಾರಗಳು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಸಾಧನೆಗಳನ್ನು ಮಾಡಿರುವ ವಿಶೇಷ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸುತ್ತಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಸಾಧನೆಗೆ ಕೊನೆಯೇ ಇಲ್ಲ. ಸಾಧನೆ ಮಾಡಿರುವವರು ಭವಿಷ್ಯದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಬೇಕಾದ ಅಗತ್ಯವಿದೆ. ಸಾಧನೆ ಮಾಡಿದವರು ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದರು.

ನೈರುತ್ವ ರೈಲ್ವೆಯ ಬಳ್ಳಾರಿ ಕಚೇರಿಯಲ್ಲಿ ಚೀಫ್ ಕಮರ್ಷಿಯಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಹೊನ್ನೂರುಸ್ವಾಮಿ, ಕರ್ನಾಟಕ ಫಿಲಂ ಚೇಂಬರ್‍ನ ಸದಸ್ಯರಾಗಿ ಚುನಾಯಿತರಾಗಿರುವ ಬಿ. ರಾಂಪ್ರಸಾದ್, ಯುಪಿಎಸ್‍ಸಿ ಪರೀಕ್ಷೆಯಲ್ಲಿ 409ನೇ ರ್ಯಾಂಕ್ ಪಡೆದಿರುವ ಸಿ. ಯಶವಂತ ಕುಮಾರ್, 786ನೇ ರ್ಯಾಂಕ್ ಅನಿರುದ್ಧ್ ಕಟ್ಟೀಮನಿ ಮತ್ತು ದಾನಿಗಳಾಗಿರುವ ಡಿ.ಸಿ. ಬಸಣ್ಣ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ. ಯಶವಂತ ಕುಮಾರ್ ಅವರು, ಎಂಬಿಬಿಎಸ್ ಓದುವಾಗಲೇ ಅಧಿಕಾರಿಯಾಗಲು ಕನಸು ಕಂಡು ನಾಲ್ಕ ಸಲ ಯುಪಿಎಸ್‍ಸಿ ಪರೀಕ್ಷೆಗಳನ್ನು ಬರೆದೆ. ನಾಲ್ಕನೇಸಲ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿದ್ದೇನೆ. ನನ್ನನ್ನು ಅಭಿನಂದಿಸಿ ಪ್ರೋತ್ಸಾಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.

ಕರ್ನಾಟಕ ಫಿಲ್ಮ್ ಚೇಂಬರ್‍ನ ಸದಸ್ಯರಾಗಿರುವ ಬಿ. ರಾಂಪ್ರಸಾದ್ ಅವರು, ಕಲ್ಯಾಣ ಕರ್ನಾಟಕ ಭಾಗದಿಂದ ಪ್ರೊಡ್ಯೂಸರ್ಸ್ ವಿಭಾಗದಲ್ಲಿ ನಾನು ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿನಲ್ಲಿ ಅನೇಕರ ಶ್ರಮವಿದೆ – ಆಶೀರ್ವಾದವಿದೆ ಎಂದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಕಮಿಟಿಗಳ ಚೇರ್ಮನ್‍ಗಳು, ವಿಶೇಷ ಆಹ್ವಾನಿತರು – ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku