ಗ್ರಾಮಸ್ಥರ ಹೋರಾಟಕ್ಕೆ ಜಯ – ಸ್ಮಶಾನ ಭೂಮಿ ಒತ್ತುವರಿ ತೆರವು

Posted by

ಸುದ್ದಿ ಬೆಳಕು ವಾರ್ತೆ

ಹೊಳಲ್ಕೆರೆ : ತಾಲೂಕಿನ ಅಪ್ಪರಸನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮೀಸಲಿರುವ 20 ಗುಂಟೆ ಸರ್ಕಾರಿ ಸ್ಮಶಾನ ಭೂಮಿ ಒತ್ತುವರಿಯನ್ನು ಆಡನೂರು ಗ್ರಾಪಂ ಪಿಡಿಓ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶುಕ್ರವಾರ ತೆರುವುಗೊಳಿಸಲಾಯಿತು. ಈ ಮೂಲಕ ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಅಪ್ಪರಸನಹಳ್ಳಿ ಗ್ರಾಮದ ರಿ.ಸ.ನಂ.78ರಲ್ಲಿ ಒಟ್ಟು 11 ಎಕರೆ 37 ಗುಂಟೆ ಸರ್ಕಾರಿ ಹುಲ್ಲುಬನ್ನಿ ಖರಾಬು ಜಮೀನು ಇದೆ. ಇದರಲ್ಲಿ 20 ಗುಂಟೆ ಜಾಗವನ್ನು ಹೊಳಲ್ಕೆರೆ ತಹಶೀಲ್ದಾರ್ ಅವರು ಗ್ರಾಮಸ್ಥರಿಗೆ ಸ್ಮಶಾನ ಭೂಮಿಯನ್ನು ಮೀಸಲಿರಿಸಿ, ನಿರ್ವಹಣೆಯನ್ನು ನಾಲ್ಕು ವರ್ಷಗಳ ಹಿಂದೆಯೇ ಆಡನೂರು ಗ್ರಾಮ‌ ಪಂಚಾಯತಿ ವಹಿಸಿದ್ದರು.

ವಾಸ್ತವ ಹೀಗೆ ಇದ್ದರು ಕೂಡ, ವ್ಯಕ್ತಿಯೊಬ್ಬರು ಸದರಿ ಸರ್ಕಾರಿ ಸ್ಮಶಾನ ಭೂಮಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಏರಿಸಿ ಕಬಳಿಸಲು ಸಂಚು ರೂಪಿಸಿದ್ದರು. ಇದರಿಂದ ಎಚ್ಚೆತ್ತುಕೊಂಡು ಗ್ರಾಮಸ್ಥರು ಕೆಆರ್ ಎಸ್ ಪಕ್ಷದವರ ಗಮನಕ್ಕೆ ತಂದಿದ್ದರು. ಕೆಆರ್ ಎಸ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಆನಂದ್, ಕಾರ್ಯಕರ್ತರಾದ ರಮೇಶ್, ದೇವರಾಜ್ ಅವರು ತಹಶೀಲ್ದಾರ್ ಅವರಿಗೆ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಒತ್ತುವರಿ ತೆರವುಗೊಳಿಸುವಂತೆ ದೂರು ನೀಡಿದ್ದರು

ತಾಲೂಕು ಪಂಚಾಯತಿ ಇಓ ಆದೇಶದ ಮೇರೆಗೆ ಆಡನೂರು ಗ್ರಾಮ ಪಂಚಾಯತಿ ಪಿಡಿಓರವರು ಜೆಸಿಬಿ ಮೂಲಕ ಸ್ಮಶಾನ ಭೂಮಿ ಸುತ್ತ ಟ್ರಂಚ್ ಹೊಡಿಸಿ, ಒತ್ತುವರಿಯನ್ನು ತೆರವುಗೊಳಿಸಿದರು. ಈ ವೇಳೆ ಗ್ರಾಮಸ್ಥರು ಉಪಸ್ಥಿತರಿದ್ದು, ಸರ್ಕಾರಿ ರಜಾ ದಿನವೇ ಒತ್ತುವರಿ ತೆರವುಗೊಳಿಸಿದ ಪಿಡಿಓ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Suddi Belaku