
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ. ಜಾ. ಮತ್ತು ಪ. ಪಂ. ವಸತಿ ನಿಲಯಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಇದ್ದರೂ ಅದರ ಸದ್ಬಳಕೆ ಆಗದೇ ವಾರ್ಡನ್ ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ತಾಲ್ಲೂಕು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಶಾಮೀಲಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥ ಅಧಿಕರಿಗಳ ಅಮಾನತು ಮಾಡುವಂತೆ ಕರವೇ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಆಗ್ರಹಿಸಿದರು.
ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಹಾಗೂ ನಂತರದ ವಸತಿ ನಿಲಯಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಇದ್ದರೂ ಅದನ್ನು ನಿಷ್ಕ್ರಿಯಗೊಳಿಸಿ ತಮಗೆ ಬೇಕಾದಂತೆ ದಾಖಲೆಗಳನ್ನು ಮಾಡಿ ಅಕ್ರಮ ಎಸಗುತ್ತಿರುವುದು ನಡೆಯುತ್ತಿದೆ. ಪ್ರತಿ ವಸತಿ ನಿಲಯಗಳಲ್ಲಿ ಇರುವ ಎಲ್ಲ ಮಕ್ಕಳಿಗಿಂತಲೂ ಸರ್ಕಾರ ನಿಗದಿಪಡಿಸಿದ ಸಂಖ್ಯೆಯ ಮಕ್ಕಳಿಗೆ ನಿತ್ಯ ಊಟ ಒದಗಿಸುತ್ತಿರುವುದಾಗಿ ದಾಖಲೆಗಳಲ್ಲಿ ಹೇಳಲಾಗುತ್ತಿದೆ ಎಂದ ಆರೋಪಿಸಿದರು.
ಕೆಲವೇ ಮಕ್ಕಳಿಗೆ ಮಾತ್ರ ಊಟ ಒದಗಿಸಿ ಬಯೋಮೆಟ್ರಿಕ್ ಮಾಡುವಾಗಿ ಹಾಸ್ಟೆಲ್ ನ ಸರ್ಕಾರ ನಿಗದಿ ಪಡಿಸಿದಷ್ಟು ಮಕ್ಕಳಿಗೆ ಊಟ ಕೊಟ್ಟಂತೆ ಬಯೋ ಮೆಟ್ರಿಕ್ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಇಲ್ಲದ ಮಕ್ಕಳಿಗೂ ಊಟ ಕೊಟ್ಟಂತೆ ಬಯೋ ಮೆಟ್ರಿಕ್ ಹಾಜರಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
ವರ್ಷವಿಡಿ ನಿತ್ಯ ೧೦೦ ಮಕ್ಕಳು ಊಟ ಮಾಡಿದ್ದಾಗಿ ದಾಖಲೆಗಳು ಹೇಳುತ್ತಿವೆ ಆದರೆ ಪ್ರತಿನಿತ್ಯವೂ ಇಷ್ಟೇ ಸಂಖ್ಯೆಯಲ್ಲಿ ಮಕ್ಕಳು ಊಟ ಮಾಡಿದ್ದಾರೆ ಎಂಬುದೇ ಅವೈಜ್ಞಾನಿಕ ಅಲ್ಲದೇ ಎಷ್ಟೋ ಮಕ್ಕಳು ಊರಿಗೆ ಹೋಗಿರಲಿ ಇಲ್ಲವೇ ಬೇರೆ ಕಡೆ ಹೋಗಿದ್ದರೂ ಅವರೆಲ್ಲರನ್ನು ಸೇರಿಸಿ ಒಟ್ಟು ೧೦೦ ಮಕ್ಕಳು ಊಟ ಮಾಡಿದಂತೆ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ.
ಈ ಅವ್ಯವಹಾರದಲ್ಲಿ ವಾರ್ಡನ್ ಜೊತೆಗೆ ಮೇಲಾಧಿಕಾರಿಗಳು ಇಲಾಖೆಯ ಸಿಬ್ಬಂದಿಗಳು ಶಾಮೀಲಾಗಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಆದ್ದರಿಂದ ಸದ್ರಿ ವಂಚಕ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ವಜಾ ಮಾಡಬೇಕೆಂದು ಒತ್ತಯಿಸುತ್ತೇವೆ. ಇಲ್ಲವಾದಲ್ಲಿ ಲೋಕಾಯುಕ್ತರ ಮೊರೆ ಹೋಗಬೇಕಾಗುತ್ತದೆ ಎಂದು ಮಲ್ಲು ಮಾಳಕೇರಿ, ಅಂಬ್ರೇಶ್ ಹತ್ತಿಮನಿ, ಸಂತೋಷ ನಿರ್ಮಲಕರ್, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಹೊನಗೇರಾ, ರವಿ ಜಮ್ಮಾರ್, ಕಾಶೀನಾಥ ನಾನೇಕ್, ಅಶೋಕ ನಾಯಕ, ಶರಣು ಸೇರಿದಂತೆ ಹಲವರು ಎಚ್ಚರಿಕೆ ನೀಡಿದ್ದಾರೆ.












Leave a Reply