ಮಕ್ಕಳೇ ದೇಶದ ಭವಿಷ್ಯ: ಶಾಲಾ ಪ್ರಾರಂಭೋತ್ಸವದಲ್ಲಿ ಟಿ.ಪಿ. ಉಮೇಶ್ ಕರೆ

Posted by

ಸುದ್ದಿ ಬೆಳಕು ವಾರ್ತೆ

ಹೊಳಲ್ಕೆರೆ : ಮಕ್ಕಳೆ ನಮಗೆ ದೇಶ ಮಕ್ಕಳೆ ನಮಗೆ ವಿಶ್ವ ಮಕ್ಕಳೆ ನಮಗೆ ಭವಿಷ್ಯ. ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸುವ ಜೊತೆಗೆ ಕೌಶಲ್ಯವಂತ ಸಂಸ್ಕಾರವಂತ ಸಂಸ್ಕೃತಿಶೀಲರನ್ನಾಗಿಸಬೇಕಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.
 ತಾಲ್ಲೂಕಿನ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗು ಪೋಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು 2026-27 ನೇ ಸಾಲಿನ ಶೈಕ್ಷಣಿಕ ವರ್ಷ ಉತ್ತಮ ಶಿಕ್ಷಣ ಉಜ್ವಲ ಭವಿಷ್ಯ ಎಂಬ ಧ್ಯೇಯದೊಂದಿಗೆ ಆರಂಭಗೊಳ್ಳುತ್ತಿದೆ. ಗ್ರಾಮದ ಎಲ್ಲ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಿ ತಪ್ಪದೇ ಶಾಲೆಗೆ ಕಳುಹಿಸಿರಿ. ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಉಚಿತ ಪುಸ್ತಕ ಸಮವಸ್ತ್ರ ನೀಡುವುದರ ಜೊತೆಗೆ ಮುಂಜಾನೆ ಪೌಷ್ಟಿಕಾಂಶಭರಿತ ಹಾಲು, ಮಧ್ಯಾಹ್ನ ಊಟ, ಪೂರಕ ಪೌಷ್ಟಿಕ ಆಹಾರದಲ್ಲಿ ಬಾಳೆಹಣ್ಣು ಮತ್ತು ಮೊಟ್ಟೆ ನೀಡುತ್ತಿದೆ. ಮಕ್ಕಳ ಸದೃಢ ದೇಹದ ಬೆಳವಣಿಗೆಯಿಂದ ಸದೃಢ ಮಾನಸಿಕ ಹಾಗು ಬೌದ್ಧಿಕ ಸಾಮರ್ಥ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್ ಟಿವಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಚಟುವಟಿಕೆಯಾಧಾರಿತ ಕಲಿಕೆ ಅಳವಡಿಸಿಕೊಳ್ಳಲಾಗಿದೆ. ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರಿಗೆ ಪೋಷಕರು ನಿರಂತರ ಸಹಕಾರ ನೀಡಬೇಕೆಂದು ತಿಳಿಸಿದರು.
ಶಾಲಾ ಪ್ರಾರಂಭೋತ್ಸವ ಹಾಗು ಪೋಷಕರ ಶಿಕ್ಷಕರ ಮಹಾಸಭೆಯಲ್ಲಿ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ದ ಹಾಗು ಪುಸ್ತಕಗಳ ವಿತರಿಸಿಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಪವನ್ ಕುಮಾರ್ ಬೆಂಗಳೂರು ಎಲ್ಲ ವಿದ್ಯಾರ್ಥಿಗಳಿಗು ಜಿಯೋಮೆಟ್ರಿ ಬಾಕ್ಸ್ , ಪೆನ್ನು ಪೆನ್ಸಿಲ್ ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಗೋವಿಂದಪ್ಪ, ರಮೇಶ, ನಿಜಲಿಂಗಪ್ಪ, ಸಿದ್ದೇಶ, ಈರಮ್ಮ, ಪ್ರೇಮ, ಶಾರದಮ್ಮ, ಮುಖ್ಯೋಪಾಧ್ಯಾಯರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ, ನಿವೃತ್ತ ಶಿಕ್ಷಕರಾದ ಡಿ.ಸಿದ್ಧಪ್ಪ, ಅಂಗನವಾಡಿ ಶಿಕ್ಷಕರಾದ ಸುಮ, ರಾಧಾ ಹಾಗು ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku